Friday, August 18, 2017

ಪತ್ರಿಕೋದ್ಯಮ ಪ್ರತಿಷ್ಠೆಯಾಗದೆ ಜವಾಬ್ದಾರಿಯಾಗಲಿ: ಉಗಮ ಶ್ರೀನಿವಾಸ್

ತುಮಕೂರು: ಪತ್ರಿಕೋದ್ಯಮ ಪ್ರತಿಷ್ಠೆಯಾಗದೆ ಜವಾಬ್ದಾರಿಯಾಗಬೇಕು. ಸಮಾಜವನ್ನು ಪ್ರಭಾವಿಸುವ ಕೆಲಸವನ್ನು ಪತ್ರಕರ್ತರು ಮಾಡಬೇಕು ಎಂದು ಪತ್ರಕರ್ತ, ಸಾಹಿತಿ ಉಗಮ ಶ್ರೀನಿವಾಸ್ ಅಭಿಪ್ರಾಯಪಟ್ಟರು.

ಉಗಮ ಶ್ರೀನಿವಾಸ್
ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಆಗಸ್ಟ್ 17, 2017ರಂದು ಆಯೋಜಿಸಿದ ಕಾರ್ಯಕ್ರಮದಲ್ಲಿ ‘ಗ್ರಾಮೀಣ ವರದಿಗಾರಿಕೆ: ಹೊಸ ಸಾಧ್ಯತೆಗಳ ಅನ್ವೇಷಣೆ’ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು ಪ್ರಭುತ್ವಕ್ಕೆ ನಾಟುವಂತಹ ವರದಿಗಳನ್ನು ಬರೆಯುವುದು ಪತ್ರಕರ್ತರ ಜವಾಬ್ದಾರಿಯಾಗಬೇಕು ಎಂದರು.

ಪತ್ರಕರ್ತ ಬಹಿರಂಗದಲ್ಲಿ ನಿಷ್ಠುರನಾಗಿ ಕಂಡರೂ ಅಂತರಂಗದಲ್ಲಿ ಮೃದುವಾಗಿರಬೇಕು. ಜನಸಾಮಾನ್ಯರ ಸಮಸ್ಯೆಗಳನ್ನು ಸಹಾನುಭೂತಿಯಿಂದ ನೋಡಿ ಸರ್ಕಾರದ ಕಣ್ಣು ತೆರೆಸುವ ಕೆಲಸ ಮಾಡಬೇಕು. ಧನಾತ್ಮಕವಾಗಿ ಯೋಚಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದರು.

ಪತ್ರಕರ್ತ ನಿರಂತರವಾಗಿ ಹೊಸದರ ಅನ್ವೇಷಣೆ ನಡೆಸಬೇಕು. ಆಯಾ ಕಾಲದ ಹೊಸ ವಿದ್ಯಮಾನಗಳನ್ನು ತಿಳಿದುಕೊಳ್ಳಬೇಕು. ಆಗ ಮಾತ್ರ ಆತ ಬದಲಾಗುತ್ತಿರುವ ಸಮಾಜಕ್ಕೆ ಸ್ಪಂದಿಸಬಹುದು ಎಂದು ವಿಶ್ಲೇಷಿಸಿದರು.

ಮುದ್ರಣ ಮಾಧ್ಯಮ ಆಧುನಿಕ ಸಾಮಾಜಿಕ ಜಾಲತಾಣಗಳ ಸ್ಪರ್ಧೆ ಎದುರಿಸಬೇಕಾಗಿದೆ. ಫೇಸ್‍ಬುಕ್‍ನಂತಹ ತಾಣಗಳು ಘಟನೆಗಳ ನೇರಪ್ರಸಾರ ಮಾಡುತ್ತಿರುವ ಈ ಕಾಲದಲ್ಲಿ ಮರುದಿನ ಬೆಳಗ್ಗೆ ಓದುಗರ ಕೈಸೇರುವ ಪತ್ರಿಕೆಗಳು ಎದುರಿಸುವ ಸವಾಲಿನ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಿದೆ ಎಂದರು.

ದೇವರಾಯನದುರ್ಗದಂತಹ ಜೈವಿಕ ವೈವಿಧ್ಯಮಯ ತಾಣಗಳು ಮರಳು ಗಣಿಗಾರಿಕೆಗೆ ತುತ್ತಾಗಿವೆ. ಜಯಮಂಗಲಿ ಹುಟ್ಟುತ್ತಲೇ ಮಾಯವಾಗುತ್ತಿದೆ. ನಗರ ಪಾಲಿಕೆ ವ್ಯಾಪ್ತಿಯೊಂದರಲ್ಲೇ 133 ಕೊಳವೆ ಬಾವಿಗಳಿವೆ. ಪಾವಡಗ, ಶಿರಾ, ಮಧುಗಿರಿ ಪ್ರದೇಶಗಳಲ್ಲಿ ಫ್ಲೋರೈಡ್ ಸಮಸ್ಯೆ ವಿಪರೀತವಾಗಿದೆ. ಇವುಗಳ ಬಗ್ಗೆ ಗಮನ ಸೆಳೆಯುವ ಕೆಲಸಗಳನ್ನು ಮಾಧ್ಯಮಗಳು ನಿರಂತರವಾಗಿ ಮಾಡಬೇಕಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಬಿ. ಕರಿಯಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ಪ್ರಾಯೋಗಿಕ ಕಲಿಕೆಗೆ ಹೆಚ್ಚಿನ ಒತ್ತು ನೀಡಬೇಕು ಎಂದರು. ಪತ್ರಿಕೋದ್ಯಮ ವಿದ್ಯಾರ್ಥಿಗಳ ಪ್ರಾಯೋಗಿಕ ಸಂಚಿಕೆ ‘ಕ್ಯಾಂಪಸ್ ಸುದ್ದಿ’ಯನ್ನು ಇದೇ ಸಂದರ್ಭ ಬಿಡುಗಡೆಗೊಳಿಸಲಾಯಿತು.

ವಿಭಾಗದ ಮುಖ್ಯಸ್ಥ ಸಿಬಂತಿ ಪದ್ಮನಾಭ ಕೆ. ವಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ರಮ್ಯ ಕೆ. ಎಸ್. ನಿರೂಪಿಸಿದರು. ಶಶಿಕುಮಾರ್ ಅತಿಥಿಗಳ ಪರಿಚಯ ಮಾಡಿದರು. ಧನಲಕ್ಷ್ಮಿ ಎಚ್. ಟಿ. ಸ್ವಾಗತಿಸಿದರು. ನರಸಿಂಹಮೂರ್ತಿ ಟಿ. ಆರ್. ವಂದಿಸಿದರು. ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ, ಪ್ರತಿಭಾ ಪ್ರದರ್ಶನ ನಡೆಯಿತು.

No comments:

Post a Comment