Tuesday, March 8, 2011

ಸ್ವಸಾಮರ್ಥ್ಯದ ಬಗ್ಗೆ ಅಪನಂಬಿಕೆ ಬೇಡ

Here is a response given by Ramya B T, one of our students of final year, to the debate started by Udayavani daily on the topic whether Indian agriculture requires foreign investment. The response was published on March 2, 2011. The original page can be viewed HERE.

ಯಾವ ರೀತಿಯಿಂದ ನೋಡಿದರೂ ಭಾರತದ ಕೃಷಿ ಕ್ಷೇತ್ರಕ್ಕೆ ವಿದೇಶೀ ಬಂಡವಾಳದ ಅವಶ್ಯಕತೆಯಿಲ್ಲ. ಭಾರತ ತನ್ನ ಕೃಷಿ ಕ್ಷೇತ್ರವನ್ನು ತಾನೇ ಅಭಿವೃದ್ಧಿಪಡಿಸಿಕೊಳ್ಳಬಲ್ಲ ಸ್ವಾವಲಂಬಿಯೂ ಸ್ವಾಭಿಮಾನಿಯೂ ಆಗಿದೆ.
ಭಾರತ ಯಾವತ್ತು ವಿಶ್ವವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿತೋ, ಅವತ್ತಿನಿಂದ ಒಂದಲ್ಲ ಒಂದು ರೀತಿಯಲ್ಲಿ ವಿದೇಶೀ ಕಂಪೆನಿಗಳ ಅಧೀನಕ್ಕೆ ಒಳಗಾಗುತ್ತ ಬರುತ್ತಿದೆ. ವರ್ಷ ಕಳೆದಂತೆ ಹೊಸಹೊಸ ಅಂತಾರಾಷ್ಟ್ರೀಯ ನಿಯಂತ್ರಣಗಳಿಗೆ ಕಟ್ಟುಬೀಳುತ್ತಿದೆ. ಹೀಗಾಗಿ, ವ್ಯವಸಾಯಕ್ಕಾಗಿ ವಿದೇಶೀ ಬಂಡವಾಳದ ಮೊರೆಹೋದರೆ, ಅದರಿಂದಾಗುವ ಲಾಭ ತಾತ್ಕಾಲಿಕವೇ ಹೊರತು ಬೇರೇನಲ್ಲ. ಈಗಾಗಲೇ ಹಲವಾರು ರೀತಿಗಳಲ್ಲಿ ಭಾರತದ ಕೃಷಿ ವಿದೇಶಿ ಬಹುರಾಷ್ಟ್ರೀಯ ಕಂಪೆನಿಗಳ ಹಿಡಿತಕ್ಕೆ ಬಂದಿದ್ದು, ಭಾರತದ ರೈತರು ತಮ್ಮ ಬಿತ್ತನೆ ಬೀಜಗಳ ಮೇಲಿನ ಹಕ್ಕುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಸಾಂಪ್ರದಾಯಿಕವಾಗಿ ನಮ್ಮಲ್ಲೇ ದೊರೆಯುತ್ತಿದ್ದ ಅತ್ಯುತ್ತಮ ತಳಿಯ ಬೀಜಗಳನ್ನು ಬಳಸಲಾಗದೆ ವಿದೇಶೀ ಕಂಪೆನಿಗಳು ಸೂಚಿಸುವ ಬೀಜಗಳನ್ನೇ ದುಬಾರಿ ದರ ತೆತ್ತು ಖರೀದಿಸಿ ಬಳಸುವ ಪರಿಸ್ಥಿತಿ ಎದುರಾಗುತ್ತಿದೆ. ಬೆರಳೆಣಿಕೆಯ ರೈತರು ನಮ್ಮದೇ ಮಾದರಿಯ ಸಾವಯವ ಕೃಷಿ ಅನುಸರಿಸಲು ಶತಪ್ರಯತ್ನ ನಡೆಸುತ್ತಿದ್ದರೂ ಬಹುರಾಷ್ಟ್ರೀಯ ಕಂಪೆನಿಗಳು ರಾಸಾಯನಿಕ ಗೊಬ್ಬರ ಹಾಗೂ ಮಾರಕ ಕೀಟನಾಶಕಗಳನ್ನು ಬಹುತೇಕ ರೈತರ ಮೇಲೆ ಹೇರುತ್ತಿವೆ.
ಭಾರತದ ಕೃಷಿಯ ಅಭಿವೃದ್ಧಿಗೆ ವಿದೇಶೀ ಬಂಡವಾಳ ಬೇಕು ಎಂಬುದು ಕೇವಲ ಭ್ರಮೆ ಮಾತ್ರ. ರಾಜಕೀಯ ಇಚ್ಛಾಶಕ್ತಿಯೊಂದಿದ್ದರೆ ಸ್ವಸಾಮರ್ಥ್ಯದಿಂದ ನಮ್ಮ ಕೃಷಿ ಕ್ಷೇತ್ರ ಎದ್ದು ನಿಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ. ಕೃಷಿ ಬಜೆಟ್‌ನಂತಹ ಹೊಸ ಪ್ರಯತ್ನಗಳು ರೈತರ ಪಾಲಿಗೆ ಆಶಾದಾಯಕ ದಿನಗಳ ಬಗ್ಗೆ ಭರವಸೆ ಮೂಡಿಸುತ್ತವೆ. ಕೇಂದ್ರ ಬಜೆಟ್‌ನಲ್ಲೂ ರೈತರಿಗೆ ಸಂತಸ ತರುವಂತಹ ವಿಷಯಗಳಿವೆ. ಇವೆಲ್ಲ ನೂರಕ್ಕೆ ನೂರು ಸಮರ್ಪಕ ರೀತಿಯಲ್ಲಿ ಅನುಷ್ಠಾನಗೊಂಡರೆ ಅದಕ್ಕಿಂತ ಹೆಚ್ಚು ಇನ್ನೇನೂ ಬೇಡ. ಇಲ್ಲದಿದ್ದರೆ ಹಿತ್ತಲ ಗಿಡ ಮದ್ದಲ್ಲ ಎಂದು ನಮ್ಮ ಸಾಮರ್ಥ್ಯವನ್ನು ನಾವೇ ಕಡೆಗಣಿಸಿದಂತಾಗುತ್ತದೆ.