Friday, February 13, 2015

ಎನ್.ಎಸ್.ಎಸ್.ನಿಂದ ರಕ್ತದ ಗುಂಪು ವರ್ಗೀಕರಣ ಶಿಬಿರ

ನಮ್ಮ ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಕಡೆಯಿಂದ ನಾವೊಂದು ರಕ್ತದಾನ ಶಿಬಿರ ಏರ್ಪಡಿಸಿದರೇನು ಎಂಬ ಯೋಚನೆ ಬಂದಾಗ, ಅದಕ್ಕೂ ಮುನ್ನ ನಮ್ಮ ವಿದ್ಯಾರ್ಥಿಗಳಿಗೆಲ್ಲ ಅವರವರ ಬ್ಲಡ್ ಗ್ರೂಪ್ ಗೊತ್ತಿದೆಯೇ ಎಂಬ ಕುತೂಹಲ ಮೂಡಿತು. ಸುಮ್ಮನೇ ತರಗತಿವಾರು ಒಂದು ಸ್ಥೂಲ ಸರ್ವೇ ಮಾಡಿದೆವು. ಏನಿಲ್ಲವೆಂದರೂ 300ಕ್ಕೂ ಹೆಚ್ಚು ಹುಡುಗ ಹುಡುಗಿಯರಿಗೆ ತಮ್ಮ ರಕ್ತದ ಗುಂಪು ತಿಳಿದಿಲ್ಲ  ಎಂಬುದು ಗೊತ್ತಾಯ್ತು.

ಹಾಗಾದರೆ ಮೊದಲು ಆಗಬೇಕಾದ್ದು ವಿದ್ಯಾರ್ಥಿಗಳಿಗೆ ಆ ತಿಳುವಳಿಕೆ ಕೊಡುವುದು ಎಂದುಕೊಂಡು, ತುಮಕೂರು ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಸಹಯೋಗದಲ್ಲಿ ಒಂದು ಶಿಬಿರ ಹಮ್ಮಿಕೊಂಡುಬಿಟ್ಟೆವು. ಕೆಲವೇ ಗಂಟೆಗಳಲ್ಲಿ 305 ಮಂದಿ ಹುಡುಗ-ಹುಡುಗಿಯರು ತಮ್ಮ ರಕ್ತದ ಗುಂಪು ತಿಳಿದುಕೊಂಡುಬಿಟ್ಟರು. ಅದಕ್ಕೂ ಮುನ್ನ ಜಿಲ್ಲಾ ಸರ್ಕಾರಿ ರಕ್ತನಿಧಿಯ ಅಧಿಕಾರಿ ಡಾ. ವೀಣಾ ಶಿಬಿರವನ್ನು ಉದ್ಘಾಟಿಸಿ ವಿದ್ಯಾರ್ಥಿಗಳ ಜತೆ ಸಂವಾದ ಮಾಡಿದರು.

ಈ ಬಗ್ಗೆ ಪತ್ರಿಕೆಗಳಲ್ಲಿ ಬಂದ ವರದಿ ಹೀಗಿದೆ:


ತುಮಕೂರು: ಪ್ರತಿಯೊಬ್ಬ ವ್ಯಕ್ತಿಯೂ ತನ್ನ ರಕ್ತದ ಗುಂಪಿನ ಬಗ್ಗೆ ಅರಿವು ಹೊಂದುವುದು ಅವಶ್ಯಕ. ಇದು ಆತನ ವೈಯುಕ್ತಿಕ ಹಾಗೂ ಸಮಾಜದ ಒಟ್ಟಾರೆ ಹಿತದೃಷ್ಟಿಯಿಂದಲೂ ತುಂಬ ಅನಿವಾರ್ಯ ಎಂದು ತುಮಕೂರು ಜಿಲ್ಲಾ ಆಸ್ಪತ್ರೆ ರಕ್ತನಿಧಿ ಅಧಿಕಾರಿ ಡಾ. ವೀಣಾ ತಿಳಿಸಿದರು.

ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ರೆಡ್‍ಕ್ರಾಸ್ ಹಾಗೂ ಜಿಲ್ಲಾ ಆಸ್ಪತ್ರೆ ರಕ್ತನಿಧಿ ಘಟಕಗಳ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಆವರಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಉಚಿತ ರಕ್ತದ ಗುಂಪು ವರ್ಗೀಕರಣ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಕ್ತದ ಗುಂಪಿನ ಬಗ್ಗೆ ತಿಳುವಳಿಕೆ ಇದ್ದರೆ ಅದು ಆಪತ್ಕಾಲದಲ್ಲಿ ನಮ್ಮನ್ನು ಕಾಪಾಡುತ್ತದೆ. ಅನಿವಾರ್ಯ ಸಂದರ್ಭಗಳಲ್ಲಿ ರಕ್ತದಾನ ಮಾಡುವುದಕ್ಕೂ ತುರ್ತು ಅವಶ್ಯಕತೆಗಳಿಗೆ ರಕ್ತ ಪಡೆಯುವುದಕ್ಕೂ ಇದರಿಂದ ಸಹಾಯವಾಗುತ್ತದೆ ಎಂದರು.

ಆರೋಗ್ಯವಂತ ಪುರುಷರು ಮೂರು ತಿಂಗಳಿಗೊಮ್ಮೆಯೂ, ಮಹಿಳೆಯರು ನಾಲ್ಕು ತಿಂಗಳಿಗೊಮ್ಮೆಯೂ ರಕ್ತದಾನ ಮಾಡಬಹುದು. ರಕ್ತದಾನದಿಂದ ವ್ಯಕ್ತಿಯ ಆರೋಗ್ಯ ಇನ್ನಷ್ಟು ವೃದ್ಧಿಯಾಗುತ್ತದೆಯೇ ಹೊರತು ಯಾವುದೇ ಹಾನಿ ಇಲ್ಲ. ಈ ಬಗ್ಗೆ ಯಾರೂ ಅಪನಂಬಿಕೆ ಬೆಳೆಸಿಕೊಳ್ಳಬಾರದು ಎಂದರು.

ರಕ್ತದಾನದಿಂದ ದೇಹದಲ್ಲಿ ಕೊಲೆಸ್ಟರಾಲ್ ಸಂಗ್ರಹವಾಗುವುದು ತಪ್ಪುತ್ತದೆ. ಹೊಸ ರಕ್ತ ಉತ್ಪಾದನೆಯಾಗುತ್ತದೆ. ರಕ್ತದಾನದಿಂದ ಅಧಿಕ ರಕ್ತದೊತ್ತಡ, ಹೃದಯಾಘಾತದಂತಹ ಗಂಭೀರ ಸಮಸ್ಯೆಗಳನ್ನು ತಡೆಯಬಹುದು ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ. ಎಂ. ಜಯರಾಮು ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲ ಬಿ. ಕರಿಯಣ್ಣ ಮಾತನಾಡಿದರು. ಎನ್.ಎಸ್.ಎಸ್. ಅಧಿಕಾರಿಗಳಾದ ಪದ್ಮನಾಭ ಕೆ. ವಿ., ಡಾ. ಚಿಕ್ಕಣ್ಣ ಹಾಗೂ ಕೆ. ಎಸ್. ಗಿರಿಜ ಉಪಸ್ಥಿತರಿದ್ದರು. ಕು. ಅನುಷಾ ಪ್ರಾರ್ಥಿಸಿದರು. ಕು. ಸಂಧ್ಯಾರಾಣಿ ನಿರೂಪಿಸಿದರು. ಸಮಾರಂಭದ ಬಳಿಕ ವಿದ್ಯಾರ್ಥಿಗಳ ರಕ್ತದ ಗುಂಪು ವರ್ಗೀಕರಣ ಕಾರ್ಯಕ್ರಮ ನಡೆಯಿತು.